Monday, 24 June 2013

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೩)

ಕೊನೆಗೂ ಮನೆ ರೀಚ್ ಆದ್ವಿ. ಗಾಡಿಯಿಂದ ಇಳಿದು ಗೇಟ್ ತೆಗೆದು ಒಳಗೆ ಕಾಲಿಡ್ತಾ ಇದ್ದಂತೆ ಸ್ವಾಗತಿಸೋಕೆ ಬಂದ್ವು ಶ್ವಾನಗಳು . ಜೋರಾಗಿ ಬೊಗಳುತ್ತಾ ಬಂದ ನಾಯಿಗಳು ನನ್ನನು ಮೂಸಿ ನೋಡಿ ಬಹಳ ವರ್ಷಗಳಿಂದ ಮುಖ ಪರಿಚಯ ಇರೋ ತರ ಬಾಲ ಅಲ್ಲಾಡ್ಸಿ ಮೈ ಮೇಲೆ ಹಾರೋಕೆ ಶುರು ಮಾಡಿದವು.ವಿಶ್ವಾಸಕ್ಕೆ ನಾಯಿ ಅನ್ನೋ ಮಾತು ಸುಳ್ಳಲ್ಲ ನೋಡಿ . ಒಂದೇ ಒಂದು ಪೀಸ್ ರೊಟ್ಟಿ ಕೊಟ್ಟವನನ್ನು ಸಾಯೋವರೆಗೂ ನೆನಪಿನಲ್ಲಿ ಇಟ್ಟುಕೊಳ್ಳೋ ನಾಯಿ ನಿಜವಾಗ್ಲೂ ಮನುಷ್ಯನ ಸ್ನೇಹಿತ ಅನ್ನೋ ಮಾತು ಸುಳ್ಳಲ್ಲ . ಅತಿಥಿಯನ್ನ ಕಂಡ ಸಂತೋಷವನ್ನ ತಡೆಹಿಡಿಯೋಕೆ ಆಗದೆ ಅಲ್ಲಿ ಇಲ್ಲಿ ಓಡಾಡಿ , ಮೈ ಮೇಲೆ ಹಾರಿ ಸ್ವಲ್ಪ ನನ್ನ ಜೀನ್ಸ್ ನಾ ಕೊಳೆ ಮಾಡಿ , ಅಲ್ಲಾಡ್ತಾ ಇರೋ ಬಾಲಾನ ಕಂಟ್ರೋಲ್ ಗೆ ತರೋಕೆ ಟ್ರೈ ಮಾಡ್ತ ಇದ್ವು . ಸ್ವಲ್ಪ ಮುದ್ದಾಡಿ ಮನೆಗೆ ಎಂಟ್ರೀ ಕೊಟ್ಟೆ .ದೊಡ್ಡಪ್ಪ ನಾ ಹತ್ರ ಸ್ವಲ್ಪ ಮಾತಾಡಿ , ನನ್ನನ್ನು ಅಪ್ಪಿಕೊಳಲ್ಲೂ ಕಾಯ್ತಾ ಇದ್ದ ನಿದ್ರಾದೇವಿಗೆ ಶರಣಾಗಿ ನಿದ್ರೆಗೆ ಜಾರಿದೆ.

ಸ್ಕೂಲ್ ಗೆ ರೆಡೀ ಆಗ್ತಾ ಇದ್ದ ಮಕ್ಕಳ ಕೂಗು ನನ್ನನ್ನ ನಿದ್ದೆಯಿಂದ ಎಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಮತ್ತೆ ಆವರಿಸುತ್ತಿದ್ದ ನಿದ್ರಾದೇವಿಯನ್ನು ಬದಿಗೊತ್ತಿ ಮೇಲೆ ಎದ್ದು ಮುಖ ತೊಳ್ಕೊಂಡು ಕಾಫೀ ಕುಡಿಯೋಕೆ ರೆಡೀ ಆದೆ . ಸಮಯ ಬೆಳಿಗ್ಗೆ 8:30 , ಸದ್ಯಕ್ಕೆ ಸುರಿತ ಇದ್ದ ಮಳೆರಾಯನಿಗೆ ಸ್ವಲ್ಪ ದಣಿವಾಗಿ ಮಳೆಯನ್ನು ನಿಲ್ಲಿಸಿದ್ದ ಅನ್ಸುತ್ತೆ. ಕಾರ್ಮೋಡಗಳು ಬದಿಗೆ ಸರಿದು ಸೂರ್ಯನ ಕಿರಣಗಳಿಗೆ ಭೂಮಿತಾಯಿಗೆ ಮುತ್ತಿಕ್ಕಲು ಅನುಕೂಲ ಮಾಡೋಕೊಡ್ತಾ ಇದ್ವು . ಮನೆ ಸುತ್ತಾ
ಬೆಟ್ಟಗಳು ಇರುವುದರಿಂದ ಸೂರ್ಯನ ಕಿರಣಗಳು ಸ್ವಲ್ಪ ತಡವಾಗೆ ಬರ್ತಾವೆ . ಕಾಫೀ ಗ್ಲಾಸ್ ಹಿಡ್ಕೊಂಡು ಹಾಗೆ ಆಚೆ ಬಂದು ಬಿಸಿಲಿಗಾಗಿ ಕಾಯ್ತಾ ಇದ್ದೇ. ಮನೆ ಸುತ್ತಾ ಅಡಿಕೆ ಮತ್ತು ಕಾಫೀ ತೋಟ . ಮನೆ ಪಕ್ಕದಲ್ಲಿ ಚಿಕ್ಕದಾದ ಹೂವು ಮತ್ತು ತರಕಾರಿಯ ತೋಟ. ಹೂವು ಮತ್ತು ಗಿಡಗಳ ಮೇಲಿದ್ದ ಮಳೆಯ ಹನಿಗಳು ಅವುಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿ ಆಗಿದ್‌ವು . ನಿಜವಾಗ್ಲೂ ಯಾವ್ದಾದ್ರೂ ಹುಡ್ಗಿಗೆ ಪ್ರಪೋಸ್ ಮಾಡ್ಬೇಕಂದ್ರೆ ಇಲ್ಲಿಗೆ ಕರೆದುಕೊಂಡು
ಬಂದು ಮಾಡ್ಬೇಕು, ಈ ಪ್ರಕೃತಿ ಸೌಂದರ್ಯದ ಮದ್ಯದಲ್ಲಿ ಯಾವ ಹೆಣ್ಣು ತಾನೇ ಇಷ್ಟ ಇಲ್ಲ ಅಂತ ಹೇಳೋಕೆ ಸಾದ್ಯ ಅಂದುಕೊಂಡೆ . ನಿಧಾನವಾಗಿ ಸೂರ್ಯನ ಕಿರಣಗಳು ಭೂಮಿಗೆ ತಾಕೋಕೆ ಶುರುವಾಯ್ತು . ಹೂವುಗಳ ಮೇಲಿದ್ದ ಮಳೆಯ ಹನಿಗಳು ಸೂರ್ಯನ ಕಿರಣಗಳು ಬಿದ್ದು ಹೊಳೆಯುವ ಮುತ್ತುಗಳ ಹಾಗೆ ಕಾಣಿಸ್ತಾ ಇದ್ದವು . ಆ ಸೌಂದರ್ಯವನ್ನು ಮತ್ತು ಕೈಯಲ್ಲಿ ಇದ್ದ ಕಾಫೀನಾ ಸವಿಯುತ್ತಾ , ಭೂಮಿ ಸ್ಪರ್ಶಿಸುತ್ತಿದ್ದ ಆ ಸೂರ್ಯನ ಕಿರಣಗಳಿಗೆ ಬೆನ್ನೊಡ್ಡಿ ಮೈ ಕಾಯಿಸಿಕೊಳ್ಳೋಕೆ ಶುರು ಮಾಡಿದೆ.

ತಿಂಡಿಗೆ ಬಾರೋ ಅನ್ನೋ ನಮ್ಮ ದೊಡ್ಡಮ್ಮನ ಕೂಗನ್ನು ಕೇಳಿ ನಿಧಾನವಾಗಿ ಒಳಗಡೆ ಚಲಿಸಿದೆ. ಮಲೆನಾಡು ಸ್ಟೈಲ್ ನಲ್ಲಿ ನೆಲದ ಮೇಲೆ ತಟ್ಟೆ ಇಟ್ಟು ಮಣೆ ಮತ್ತು ಚಾಪೆಗಳನ್ನ ಹಾಕಿದ್ರು . ಅಬ್ಬಾ ಎಷ್ಟೊಂದ್  ದಿನ ಆಗಿತ್ತು ಈ ತರ ತಿಂಡಿಗೆ ಕೂತು ಅದು ಎಲ್ಲಾರ ಜೊತೆ ಅಂದುಕೊಂಡೆ . ನಾವು ಬೆಂಗಳೂರಿನಲ್ಲಿ ಎಲ್ಲಿಗೋ ಹೋಗೋ ಆತುರದಲ್ಲಿ ಎರಡು ಇಡ್ಲಿನೋ ಇಲ್ಲ ಉಪ್ಪಿಟ್ಟನ ಹಾಗೆ ಗುಳುಂ ಅಂತ ನುಂಗಿ ಓಡ್ತಾ ಇರ್ತೀವಿ. " ನಿನ್ನೆ ಪತ್ರೊಡೆ ಮಾಡಿದ್ದೆ ಸ್ವಲ್ಪ ಹಾಕ್ಲಾ" ಅಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು . ಪತ್ರೊಡೆ ಅನ್ನೋದು ಮಲೆನಾಡಿನಲ್ಲಿ ಮರಗೆಸುವಿನಿಂದ ಮಾಡುವ ಒಂದು ಖಾರದ ಪದಾರ್ಥ. ಮಳೆಗಾಲದಲ್ಲಿ ಎಲ್ಲರ ಮನೆಯಲ್ಲೂ ಒಮ್ಮೆಯಾದರೂ ತಯಾರಾಗುವ ಈ ಪದಾರ್ಥ ತುಂಬಾ ಫೇಮಸ್ ಅಲ್ಲಿ.  ಈ ಥರ ತುಂಬಾ ಪದಾರ್ಥಗಳಿವೆ , ಎಳೆ ಬಿದಿರಿನಿಂದ ಮಾಡುವ ಪಲ್ಯ ಮತ್ತು ಹುಳಿ , ಹಲಸಿನಹಣ್ಣಿನ ಕೊಟ್ಟೆ ಕಡುಬು , ಹಲಸಿನ ಕಾಯಿ ಹಪ್ಪಳ , ಶಾವಿಗೆ ಮತ್ತು ಕಾಯಿ ಹಾಲು , ಬೆಂಕಿಯಲ್ಲಿ ಸುಟ್ಟ ಹಲಸಿನ ಬೀಜಗಳು ಹೀಗೆ ಹೇಳ್ತಾ ಹೋದರೆ ಬಾಯಲ್ಲಿ ನೀರೂರುತ್ತಾ ಹೋಗುತ್ತೆ . ಹಾಕಿದ್ದ ಪತ್ರೊಡೆಯನ್ನು ಮೆಲ್ಲುತ್ತ " ದೊಡ್ಡಮ್ಮ ಗಂಜಿ ಇದೀಯ" ಅಂತ ಕೇಳಿದೆ .
" ಪರ್ವಾಗಿಲ್ವೆ ಬೆಂಗಳೂರಿನಲ್ಲಿ ಇದ್ರೂನೂ ಇನ್ನ ಗಂಜಿ ತಿನ್ನೋ ಅಭ್ಯಾಸ ಬಿಟ್ಟಿಲ್ವೆ " ಅಂದ್ರು. ನಿಮಗೇನು ಗೊತ್ತು ಅದರ ಮಜಾ ಅಂತ ಹೇಳೋಣ ಅನ್ನಿಸ್ತಿತ್ತು .ಅಕ್ಕಿನಾ ಸ್ವಲ್ಪ ಜಾಸ್ತಿ ನೀರು ಹಾಕಿ , ತುಂಬಾ ಹೊತ್ತು ಬೇಯಿಸಿದರೆ ನಿಮ್ಮ ಗಂಜಿ ರೆಡೀ ಆಗುತ್ತೆ. ಮಾವಿನಕಾಯಿ ಉಪ್ಪಿನಕಾಯಿ ಹಾಕ್ಕೊಂಡು , ಮಜ್ಜಿಗೆ ಇಲ್ಲ ತುಪ್ಪ ಹಾಕ್ಕೊಂಡು ಗಂಜಿ ತಿನ್ನೋ ಮಜಾನೇ ಬೇರೆ. ಯಾವ ತಿಂಡಿನೂ ಅಷ್ಟು ಮಜಾ ಕೊಡೋದಿಲ್ಲ . ನನ್ನ ರುಚಿಕರ ತಿಂಡಿಯನ್ನ ಮುಗಿಸಿ ಕೈ ತೊಳೆದುಕೊಂಡು ಮೇಲೆದ್ದೆ.

ಸಮಯ 9:30 ಆಗಿತ್ತು ಅನ್ಸುತ್ತೆ . ತೋಟಕ್ಕೆ ಕೆಲಸಕ್ಕೆ ಬರುವವರು ಒಬ್ಬಬ್ಬರಾಗೆ ಬರೋಕೆ ಶುರು ಮಾಡಿದ್ರು . "ಏನ್ ಭಟ್ರೆ ಯಾವಾಗ ಬಂದ್ರಿ??  ಹಿಂದೆ ಏನಿದು ಜುಟ್ಟು ( ಹಿಂದೆ ಉದ್ದದ ಪೋನೀ ಬಿಟ್ಟಿದೀನಿ) ?? ಕುತ್ತಿಗೆ ಮೇಲೆ ಏನು ಹಚ್ಚೆನಾ ( ಕುತ್ತಿಗೆ ಮೇಲೆ ಟಾಟೂ ಇದೆ ) ?? ಯಾಕೆ ದಪ್ಪಾನೇ ಆಗಿಲ್ಲಾ?? " ಹೀಗೆ ಬರ್ತಾ ಇದ್ದ ಪ್ರಶ್ನೆಗಳ ಸುರಿಮಳೆಯನ್ನ ಡಿಪ್ಲೊಮ್ಯಾಟಿಕ್ ಆಗಿ ಆನ್ಸರ್ ಮಾಡೋಕೆ ಪ್ರಯತ್ನಿಸುತ್ತಿದ್ದೆ . ಬೆಂಗಳೂರಿಗೆ ಹೋಗಿ ದಪ್ಪ ಆಗಿಲ್ಲ ಅಂದ್ರೆ ಯಾವುದೋ ಮಹಾಪರಾಧ ಮಾಡಿರೋರ ಥರ ಕೇಳ್ತಾರೆ. " ರೀ ಸ್ವಾಮಿತಿನ್ನೋದು ನಮ್ಮ ಕೆಲಸ , ದಪ್ಪ ಆಗೋದು ಬಿಡೋದು ದೇವರಿಗೆ ಬಿಟ್ಟಿದ್ದು " ಅಂತ ಹೇಳಿಬಿಡೋಣ ಅನ್ನಿಸುತ್ತೆ. ಆದರೆ ಪಾಪ ಅವರಿಗೆ ಯಾಕೆ ಮನ ನೋಯಿಸಬೇಕು . ನನ್ನ ಐ ಫೋನ್ ನೋಡಿ ಇನ್ನೊಂದು ಹಂತಕ್ಕೆ ಹೋಗ್ಬಿಡ್ತು ಮಾತುಕತೆ. " ಬನ್ರೀ ಇಲ್ಲೀ ಭಟ್ಟರ ಹತ್ರ 35 ಸಾವಿರದ ಫೋನ್ ಇದೆ ನೋಡಿ ಬನ್ನಿ "  ಅಂದಾಗ ನನಗೆ ಅದನ್ನ ಹೇಗೆ ತಗೋಬೇಕೋ ಗೊತ್ತಾಗ್ಲಿಲ್ಲ. ಯಾಕಪ್ಪಾ ಇವರಿಗೆ ರೇಟ್ ಹೇಳಿದೆ ಅಂತ ಅನ್ನಿಸಿಬಿಡ್ತು. ಇನ್ನೊಬ್ಬರಂತು ಲಿಮಿಟ್ ಕ್ರಾಸ್ ಮಾಡಿ " ಏನ್ ಭಟ್ರೆ 35 ಸಾವಿರ ಕೊಟ್ಟಿದೀನಿ ಅಂತೀರಾ ಬರೆ ಒಂದೇ ಬಟನ್ ಇದೆ" ಅಂದಾಗ ನಾನು ಮೂಕನಾಗಿದ್ದೆ . ಅವರ ಮುಘ್ದತೆಯನ್ನ ಶ್ಳಾಗಿಸಬೇಕೋ ಇಲ್ಲಾ ಇವರಿಗೆ ಫೋನ್ ತೋರಿಸಿ ತಪ್ಪು ಮಾಡಿದೆನೋ ಅಂತ ಆತ್ಮಾವಲೋಕನದಲ್ಲಿ ತೊಡಗಿದೆ . 

ತೋಟಕ್ಕೆ ಔಷಧಿ ಹೊಡೆಯುವ ಸಮಯವಾಗಿದ್ದರಿಂದ ಕೆಲಸಕ್ಕೆ ಬಂದ ಜನ ಸ್ವಲ್ಪ ಜಾಸ್ತಿನೇ ಇದ್ರು . ಮಳೆಗಾಲದ ಸಮಯದಲ್ಲಿ ಅಡಿಕೆ ಮರದ , ಬಿಡುತ್ತಿರುವ ಅಡಿಕೆ ಕೊನೆಗಳಿಗೆ ಔಷಧಿಯನ್ನ ಸಿಂಪಡಿಸುತ್ತಾರೆ. ಮೈಲುತುತ್ತ , ಸುಣ್ಣ ಹೀಗೆ ಹಲವಾರು ಪದಾರ್ಥಗಳಿಂದ ತಯಾರಿಸುವ ಔಷಧಿಯನ್ನು ಅಡಿಕೆ ಮರಗಳ ಮೇಲೆ ಹತ್ತಿ ಅದರ ಗೊಂಚಲುಗಳಿಗೆ ಪಿಚಕಾರಿಯಿಂದ ಹೊಡೆಯಲಾಗುತ್ತೆ. ಔಷಧಿಯಲ್ಲಿ ಅಂಟಿನ ಪದಾರ್ಥ ಮಿಕ್ಸ್ ಮಾಡಿರೋದ್ರಿಂದ ಆ ಔಷಧಿ ಬೆಳೆಯುತ್ತಿರುವ ಅಡಿಕೆ ಗೊನೆಗಳಿಗೆ ಅಂಟಿಕೊಳ್ಳುತ್ತೆ .  ಔಷಧಿ ಹೊಡೆಯುವ ಕೆಲಸ ಒಳ್ಳೆ ಸರ್ಕಸ್ ನೋಡಿದ ಹಾಗೆ ಇರುತ್ತೆ . ಮಳೆ ಬಿಟ್ಟಮೇಲೆ ಮರ ಒಣಗೊವರೆಗೂ ಕಾದು ಆನಂತರ ಮರ ಹತ್ಟೋಕೆ ಶುರು ಮಾಡ್ತಾರೆ . ಮರದ ಮೇಲೆ ನೇತಾಡಿಕೊಂಡು ಪಿಚಕಾರಿಯಿಂದ ಅಕ್ಕಪಕ್ಕದ ಮರಗಳಿಗೆ ಔಷಧಿ ಸಿಂಪಡಿಸಿ , ದೋಟಿಯಿಂದ ಪಕ್ಕದ ಇನ್ನೊಂದು ಮರವನ್ನು ಎಳೆದು ಅದಕ್ಕೆ ಗಾಳಿಯಲ್ಲೇ ಜಂಪ್ ಮಾಡ್ತಾರೆ. ಹೀಗೆ ಮರದಿಂದ ಮರಕ್ಕೆ ಜಿಗಿಯುತ್ತ ಆದಷ್ಟು ಮರಗಳನ್ನ ಕವರ್ ಮಾಡ್ತಾರೆ. ಅವರ ಪಿಚಕಾರಿಗೆ ಒತ್ತಡ ಕೊಡೋದಿಕ್ಕೆ ಮರದ ಕೆಳಗಡೆ ಒಬ್ಬ ಔಷದಿಯನ್ನ ಮೇಲಕ್ಕೆ ಮಶೀನ್ ನಿಂದ ಪಂಪ್ ಮಾಡ್ತಾ ಇರ್ತಾನೆ. ಹೀಗೆ ನೋಡೋಕೆ ತುಂಬಾ ಕಷ್ಟಕರವಾಗಿ ಕಾಣಿಸೋ ಕೆಲಸವನ್ನ ಅಭ್ಯಾಸ ಇರುವವರು ತುಂಬಾ ಸರಾಗವಾಗಿ ಮಾಡಿ ಮುಗಿಸ್ತಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಬೆಳಿದಿರೋ ಎಷ್ಟೊಂದು ಜನಕ್ಕೆ ಅದೊಂದು ಮನರಂಜನೆ ತರ ಕಾಣೋದಂತು ನಿಜ.

ಅವರ ಹತ್ತಿರ ಮಾತು ಮುಗಿಸಿ , ನಾನು ಸ್ವಲ್ಪ ನಮ್ಮನೆ ಕಡೆ ಹೋಗಿ ಬರ್ತೇನೆ ಅಂತ ನಮ್ಮಣ್ಣನ ಗಾಡಿ ತಗೊಂಡು ಹೊರಟೆ. ನಮ್ಮ ಮನೆಯಲ್ಲಿ ಈಗ ಯಾರೂ ಇಲ್ಲ. ಬೀಗ ಹಾಕಿರೋ ಮನೆ, ಸುತ್ತ ತೋಟ ಇದೆ ಅಷ್ಟೇ. ಮನೆಯ ಸುತ್ತ ಮುತ್ತ ಅದಿನ್ನೆಷ್ಟು ಹುಲ್ಲು ಬೆಳೆದಿರುತ್ತೋ ಅಂದುಕೊಂಡು ಗಾಡಿ ಓಡಿಸೋಕೆ ಶುರು ಮಾಡಿದೆ.

ಸಶೇಷ

Friday, 21 June 2013

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೨ )

ಹಾಗೇ ದೆವ್ವಗಳನ್ನು ಹುಡುಕುತ್ತಾ ಹೆಜ್ಜೆ ಹಾಕುತ್ತಿದ್ದ ನನಗೆ ನನ್ನ ಕಾಲ್ನಡಿಗೆಯ ಶಬ್ದವೇ ಕರ್ಣ ಕಠೋರವಾಗಿ ಕೇಳಿಸ್ತಾ ಇತ್ತು . ಗಾಳಿಗೆ ತೂಗುಯ್ಯಾಲೆ ಆಡುತಿದ್ದ ಗಿಡಗಳ ಶಬ್ದವೇ ಸಾಕು ಒಬ್ಬ ಹೇಡಿಗೆ ಭಯ ಪಡಿಸಲು. ಚಿಕ್ಕಪ್ಪ ಯಾವಾಗ್ಲೂ ಹೇಳೋರು " ಹೆದರಿದವನಿಗೆ ಹೆದೆರಿಸುತ್ತೆ ಹೇಡಿ ದೆವ್ವ" ಅಂತ . ಯಾವ್ದೋ ದೆವ್ವ ಪಿಶಾಚಿ ಬಗ್ಗೆ ಭಯ ಪಟ್ಟುಕೊಂಡು ರಾಮ ನಾಮ ಜಪಿಸುತ್ತಾ ಸಾಗುವ ಹೇಡಿಗೆ ಈ ಗಿಡ ಮರಗಳು , ಜೀರುಂಡೆ ಬಿಬ್ರಿಗಳೇ ಸಾಕು ಪ್ರಾಣ ತೆಗೆಯೋಕೆ . ಸೂರ್ಯನ ಬೆಳಕಲ್ಲಿ ನಯನ ಮನೋಹರವಾಗಿ ಕಾಣುವ ಈ ಕಾಡು , ಗಿಡ ಮರಗಳು ರವಿ ಮಾಮ ಮರೆಯಾಗುತ್ತಿದ್ದಂತೆಲೆ ರೌದ್ರ ರೂಪ ತಾಳಿ ಜನರನ್ನ ಭಯಪಡಿಸೋಕೆ ಶುರು ಮಾಡಿ ಬಿಡ್ತಾವೆ . ಬೆಳದಿಂಗಳಲ್ಲಿ ಮರಗಳು ನಿರ್ಮಿಸುವ ಬೃಹದಾಕಾರದ ನೆರಳುಗಳು ದೂರದಿಂದ ಬ್ರಹ್ಮ ರಾಕ್ಷಸ ನಮ್ಮನ್ನು ತಿನ್ನಲು ಕಾಯ್ತಾ ಇರುವ ಹಾಗೆ ಕಾಣುತ್ತೆ . ಆ ದಿನ ನನ್ನ ಲಕ್ ಚೆನ್ನಾಗಿತ್ತು ಅನ್ಸುತ್ತೆ ಆಕಾಶದಲ್ಲಿ  ಕಾರ್ಮೋಡಗಳು  ಆವರಿಸಿ ಚಂದಮಾಮನ ಬೆಳಕನ್ನು ತಡೆ ಹಿಡಿತ ಇದ್ವು .

ಆ ಟಾರ್ ರೋಡ್ ನಲ್ಲಿ ಇರುವ ಹೊಂಡ ಗುಂಡಿಗಳನ್ನು ಅವಾಯ್ಡ್ ಮಾಡ್ಕೊಂಡು ( ಎರಡು ಅಡಿ ಅಂತರದಲ್ಲಿ ಏನಿದೆ ಅಂತ ಗೊತ್ತಾಗ್ದೇ ಇರೋವಷ್ಟು ಕಗ್ಗತ್ತಲು), ನಾವು ಶಾಲೆಗೆ ದಿನ 4 ಕಿ ಮೀ ನೆಡಿತ ಇದ್ದಿದನ ಜ್ಞಾಪಿಸಿಕೊಂಡು ಅದೇ ಉತ್ಸಾಹದಲ್ಲಿ ಮುಂದೆ ಹೆಜ್ಜೆ ಹಾಕ್ತಾ ಇದ್ದೆ. ದಿನಾ ಬೆಳಿಗ್ಗೆ 7 ಘಂಟೆಗೆ ಎದ್ದು ರೆಡೀ ಆಗಿ 8 ಘಂಟೆಗೆ ಮನೆ ಬಿಟ್ರೆ ದಾರಿಯಲ್ಲಿ ಸಿಗುವ ಎಲ್ಲಾರ ಮನೆಯಲ್ಲಿ ಸ್ವಲ್ಪ ಸ್ವಲ್ಪ ಮಾತಾಡಿ , ದಾರಿಯಲ್ಲಿ ಜೊತೆಗೆ ಸೇರ್ಕೊಳ್ತ ಇದ್ದ ಸ್ನೇಹಿತರಿಗೆ ಕಾದು ಅವರ ಜೊತೆ ಹರಟೆ ಹೊಡ್ಕೊಂಡು , ಯಾವ ದಾರಿಯಲ್ಲಿ ಹೋಗೋದು ಅಂತ ಜಗಳ ಆಡ್ಕೊಂಡು ಕೊನೆಗೂ ಒಟ್ಟಿಗೆ ಶಾಲೆ ಸೇರುವಾಗ 9:15 ಇಲ್ಲಾ 9:30 ಆಗಿರುತ್ತೆ . ಬೇಗ ಹೋದ್ರೆ ಬೇರೆ ಫ್ರೆಂಡ್ಸ್ ಜೊತೆ ಮಾತಾಡೋಕೆ ಸ್ವಲ್ಪ ಟೈಮ್ ಸಿಗುತ್ತೆ ಅನ್ನೋದು ನಮ್ಮ ಅಭಿಪ್ರಾಯ . ಹೀಗೆ ಆಲೋಚನಾ ಲಹರಿಯಲ್ಲಿ ಮುಳುಗಿದ್ದ ನನ್ನ, ಶ್ವಾನವೊಂದು ತನ್ನ ಡ್ಯೂಟೀ ನಾ ನಿಭಾಯಿಸೋಕೆ ಎಚ್ಚರಿಸಿತು.

ನಾಯಿ ಬೊಗಳುತ್ತಿದೆ ಅಂದ್ರೆ ಯಾವ್ದೋ ಮನೆ ಇದೆ ಅಂತ ಅರ್ಥ . ಅದ್ರಲ್ಲಿ ಸರ್ಪ್ರೈಸಿಂಗ್ ಏನು ಇರ್ಲಿಲ್ಲ . ಯಾಕೆಂದ್ರೆ ಬಸ್ ಸ್ಟ್ಯಾಂಡ್ ನಿಂದ ಅರ್ಧ ಕಿ ಮೀ ದೂರದಲ್ಲಿ ಒಂದು ಮನೆ ಇದೆ ಅನ್ನುವುದು ಗೊತ್ತಿತ್ತು . ಅದೊಂಥರಾ ಪಿಟ್ ಸ್ಟಾಪ್ ನಮಗೆ. ಅಲ್ಲೇ ನಿಂತು ಸ್ವಲ್ಪ ಸುಧಾರಿಸಿಕೊಳ್ಳೋಕೆ ಶುರು ಮಾಡ್ದೆ. ಬರ್ತಾ ಇದ್ದ ನನ್ನ ಏದೂಸಿರನ್ನು ಹತೋಟಿಗೆ ತರಲು ಕೆಲ ನಿಮಿಷಗಳು ಬೇಕಾಯ್ತು. ಅಷ್ಟು ಹೊತ್ತಿಗೆ ನನ್ನ ಚಳಿ ಕಮ್ಮಿ ಆಗಿ ಮೈ ಬೆವರಲು ಶುರು ಆಗಿತ್ತು. ಆಗುತ್ತಿದ್ದ ಸುಸ್ತನ್ನು ಮನಸ್ಸಿಗೆ ಹಕ್ಕೊಲ್ದೇ ಬೆಂಗಳೂರು ನಮ್ಮನ್ನ ಹಾಳು ಮಾಡಿಬಿಟ್ಟಿದೆ ಅಂತ ಮನಸ್ಸಿನಲ್ಲೇ ಬೈದುಕೊಂಡು ಮುಂದೆ ಹೆಜ್ಜೆ ಇಡಲು ಶುರು ಮಾಡಿದೆ.

10 ಮೀಟರ್ ನೆಡೆದಿದ್ದೆ ಅನ್ಸುತ್ತೆ , ದೂರದಲ್ಲಿ ಯಾವುದೋ ಒಂದು ಬಿಳಿ ಬಣ್ಣದ ಆಕಾರ ಬಿರುಸಾಗಿ ಬರುತ್ತಾ ಇರುವ ಹಾಗೆ ಭಾಸವಾಯ್ತು. ಕತ್ತಲಲ್ಲಿ ಮಸುಕು ಮಸುಕಾಗಿ ಕಾಣಿಸಿತ್ತಿದ್ದ ಆಕಾರ ನನ್ನ ಎದೆ ಬಡಿತವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು.  ಕೊನೆಗೂ ಯಾವುದೋ ದೆವ್ವ ನನ್ನ ಹಿಡಿಯೋಕೆ ಬರ್ತಾ ಇದೆ , ಛೇ ನಾನು ದೆವ್ವದ ಬಗ್ಗೆ ಅಷ್ಟು ಹಗುರವಾಗಿ ಅಂದುಕೊಳ್ಳಬಾರ್ದಿತ್ತು ಅಂತ ಅನ್ನಿಸ್ತು . ಮನಸ್ಸು ಗಟ್ಟಿ ಮಾಡ್ಕೊಂಡು ರಾಮ ನಾಮ ಜಪಿಸ್ಥ ಮುಂದೆ ಹೆಜ್ಜೆ ಇಡೋಕೆ ಶುರು ಮಾಡಿದೆ . ಆಕಾರ ನೆಡೆಯುತ್ತಿದ್ದ ಬಿರುಸಿಗೆ 2 ನಿಮಿಷದಲ್ಲಿ ಆಲ್‌ಮೋಸ್ಟ್ ನನ್ನ ಹತ್ರ ಬಂದುಬಿಟ್ಟಿತ್ತು . ಢವ ಢವ ಅಂತ ಇದ್ದ ಎದೆಯನ್ನ ಒತ್ತಿ ಹಿಡಿದು ಧೈರ್ಯ ಮಾಡಿಕೊಂಡು ಅವರ ಮುಕ ನೋಡಿದೆ. ( ನಮ್ಮ ಅಜ್ಜಿ ಹೇಳಿದ ಹಾಗೆ ದೆವ್ವಗಳಿಗೆ ಕಾಲು ಹಿಂದೆ ಮುಂದೆ ಇರುತ್ತೆ ಅನ್ನೋದನ್ನ ತುಂಬಾ ಸೀರೀಯಸ್ ಆಗಿ ತಗೊಂಡು ಅಲ್ಲಿಯವರೆಗೂ ಆಕಾರದ ಕಾಲು ನೋಡಲು ಯತ್ನಿಸುತ್ತಿದ್ದೆ ಅನ್ನೋದು ಬೇರೆ ) .  ಪಕ್ಕಾದೂರಿನ ಸಾಬ್ರು ( ನಮ್ಮೋರಲ್ಲಿ ಮುಸ್ಲಿಮ್ಸ್ ಗೆ ಸಾಬ್ರು ಅಂತ ಕರೀತೀವಿ. ನೋ ಅಫೆನ್ಸ್ . ಆವ್ರಿಗೂನು ಏನು ಪ್ರಾಬ್ಲಮ್ ಇಲ್ಲ ) , ಮೋಸ್ಟ್ಲೀ ಮೊದಲನೇ ಬಸ್ ನಲ್ಲಿ ಬರೋ ಪೇಪರ್ ತರೋಕೆ ಹೋಗ್ತಿದ್ರು ಅನ್ಸುತ್ತೆ. ಬಿಳಿ ಬಟ್ಟೆ ಹಾಕಿರೋದರಿಂದ ಸ್ವಲ್ಪ ಭಯ ಪಡಿಸಿದರು ಅಷ್ಟೇ.

ನನ್ನ ಮುಖ ನೋಡಿದ ಅವರು ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಹಾಗೆ ಮುಂದಕ್ಕೆ ಹೋದ್ರು. ಮೋಸ್ಟ್ಲೀ ಗುರುತು ಸಿಗ್ಲಿಲ್ಲಾ ಅನ್ಸುತ್ತೆ. ಇಲ್ಲ ಇವತ್ತು ಇನ್ನೊಬ್ಬ ಬಕ್ರಾ ನಾ ಭಯ ಪಡಿಸಿದೆ ಅನ್ನೋ ಖುಷಿಯಲ್ಲಿ ಮುಖ ಸರಿಯಾಗಿ ನೋಡ್ಲಿಲ್ವೇನೋ ಅಂದುಕೊಂಡು ಮುಂದೆ ಹೆಜ್ಜೆ ಇಡೋಕೆ ಶುರು ಮಾಡಿದೆ. ಚಿಕ್ಕದಾಗಿ ಬೆಳಕು ಹರಿಯೋಕೆ ಶುರು ಆಗಿತ್ತು . ಜಗತ್ತಲ್ಲಿ ಸೂರ್ಯ ಮಾತ್ರ ಅನ್ನಿಸುತ್ತೆ ದಿನ ಟೈಮ್ ಗೆ ಸರಿಯಾಗಿ ಏಳೋದು ಅಂತ ಅಂದುಕೊಂಡು ಮುಂದೆ ಹೋಗ್ತಿದ್ದಾಗ್ಲೇ ಎಲ್ಲೋ ದೂರದಲ್ಲಿ ಒಂದು ಬೈಕ್ ನಾ ಶಬ್ದ ಕೇಳಿದ ಹಾಗಾಯ್ತು .  ಅಮೃತ ಸಿಕ್ಕಿದಷ್ಟು ಖುಷಿ ಆಯ್ತು ನೋಡಿ , ಜೀವನದಲ್ಲಿ ಎಲ್ಲಾ ಕಳೆದುಕೊಂಡು ಸಾಯೋಕೆ ಹೋಗ್ತಾ ಇರೋನಿಗೆ ದಾರಿಯಲ್ಲಿ ನಿಧಿ ಸಿಕ್ಕಿದ್ರೆ ಎಷ್ಟು ಖುಷಿ ಆಗುತ್ತೋ ಅಷ್ಟು ಖುಷಿ. ಕೊನೆಗೂ ಬಂದ ಅನ್ಸುತ್ತೆ ನಮ್ಮ ಅಣ್ಣ ಅಂತ ಅಂದ್ಕೊಂಡು , ಆಗ್ತಿದ್ದ ಸುಸ್ತನ್ನ ಉತ್ಸಾಹದಲ್ಲಿ ಮುಚ್ಚಿಡ್ತಾ ಮುಂದಕ್ಕೆ ದಾಪುಗಾಲು ಹಾಕೋಕೆ ಶುರು ಮಾಡ್ದೆ.

ಮೊದಲು ಕ್ಷೀಣವಾಗಿ ಕೇಳಿಸ್ತಾ ಇದ್ದ ಶಬ್ದ ನಿಧಾನವಾಗಿ ಘಾಡವಾಗ್ತಾ ಹೋಯ್ತು. ದೂರದಲ್ಲೊಂದು ಹೆಡ್ ಲೈಟ್ ಕೂಡ ಕಾಣಿಸೋಕೆ ಶುರುವಾಯ್ತು. ಬಂದೇ ಬಿಟ್ಟ ಅಂದುಕೊಂಡು ಅವನನ್ನ ಮಾತಾಡಿಸೋಕೆ ರೆಡೀ ಆದೆ. " ಬಸ್ ಬೇಗ ಬಂತ ಮಾರಾಯ , ಮೊನ್ನೆ 6 ಘಂಟೆಗೆ ಬಂದಿದ್ದ ಅದಿಕ್ಕೆ ಸ್ವಲ್ಪ ಲೇಟ್ ಆಗಿ ಬಂದೆ" ಅಂದ . ಆಗ್ತಿದ್ದ ಸುಸ್ತನ್ನು ತೋರಿಸಿಕೊಳ್ಳದೆ " ಪರವಾಗಿಲ್ಲ ಬಿಡು ನೆಡಿಯೋದೇನು ಹೊಸತಲ್ವಲ್ಲ " ಅಂದೆ. ಗಾಡಿ ಮೇಲೆ ಕೂತು ಕ್ಷೇಮ ಸಮಾಚಾರ ಮಾತಾಡ್ತಾ ಹಾಗೆ ಮುಂದೆ ಸಾಗಿದ್ವಿ. ಈ ಚಳಿಗೆ ಒಂದು ಕಾಫೀ ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನ್ನಿಸ್ತಿತ್ತು . ಬೈಕ್ ನ ವೇಗಕ್ಕೆ ತಂಪಾಗಿ ಮುಕಕ್ಕೆ ಬೀಸ್ತಾ ಇದ್ದ ಗಾಳಿ ಒಂದು ಹೊಸ ಹುಮ್ಮಸ್ಸು ಕೊಡ್ತಾ ಇತ್ತು.  ಬೈಕ್ ನಲ್ಲಿ 15 ನಿಮಿಷ ಅವರ ಮನೆ . ತುಂಬಾ ದೂರ ಇಲ್ದೆ ಇದ್ರೂನೂ ಅಲ್ಲಿರುವ ರೋಡಿನ ಪರಿಸ್ಥಿತಿಗೆ ಅದು ಕಡಿಮೆ ಸಮಯಾನೆ . ಆದರೂ ಇವಾಗ ಪರ್ವಾಗಿಲ್ಲ ಅವರ ಮನೆಯವರೆಗೂ ಟಾರ್ ಹಾಕಿದಾರೆ. ನಾನು ಊರಲ್ಲಿ ಇದ್ದಾಗ ಬರೀ ಜೆಲ್ಲೀ ರಸ್ತೆ .

ಬೈಕ್ ನಲ್ಲಿ ಕೂತು , ಸುತ್ತ ಮುತ್ತ ಏನಾದ್ರೂ ಬದಲಾವಣೆಗಳು ಇದೆಯಾ ಅಂತ ನೋಡುತ್ತಾ ಮನೆ ಬರುವುದನ್ನೇ ಕಾಯ್ತಾ ಇದ್ದೆ.

ಸಶೇಷ

Wednesday, 19 June 2013

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೧ )

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೧ )

ಬರೆಯುವ ಮುನ್ನ
ಸ್ನೇಹಿತರೆ, ಈ ಬರವಣಿಗೆಯಲ್ಲಿ  ನಾನು ಸಿಂಪಲ್ ಕನ್ನಡ , ಎಲಾರ್ಗೂ ಓದಿ ಅರ್ಥ ಮಾಡ್ಕೊಳೋಕೆ ಈಸೀ ಆಗೋ ಥರ ಬರ್ದಿದೀನಿ . ಬೆಂಗಳೂರು ಸ್ನೇಹಿತರು ಜಾಸ್ತಿ ಇರುವುದರಿಂದ ಹೀಗೆ ಬರೆಯಲೇ ಬೇಕಾಗಿದೆ. ನಮ್ಮ ಊರಿನ ಬಗ್ಗೆ ಒಂದು ಚಿಕ್ಕ ಐಡಿಯಾ ಕೊಡುವ ಪ್ರಯತ್ನ ಮಾಡಿದೀನಿ . ಇದು ಮೊದಲನೇ ಭಾಗ .
ಧನ್ಯವಾದ


"ಜಯಪುರ ಜಯಪುರ" ಅನ್ನೋ ಕರ್ಕಶ ಕೂಗೊಂದು ಐರಾವತದ ತಂಪಾದ ಏಸೀನಲ್ಲಿ ಬ್ಲ್ಯಾಂಕೆಟ್ ಹೊದ್ದು ಕಾಲು ಚಾಚಿ ಮಲಗಿದ್ದ ನನ್ನ ಬಡಿದೆಬ್ಬಿಸ್ತು . ಮೊಬೈಲ್ ತೆಗೆದು ನೋಡಿದ್ರೆ ಇನ್ನೂ ಬೆಳಿಗ್ಗೆ 5 ಘಂಟೆ . ಇಷ್ಟು ಬೇಗ ರೀಚ್ ಆದ್ನ ಅಂತ ಡ್ರೈವರ್ ನ ಮನಸಾರೆ ಬೈದುಕೊಂಡು ಕಣ್ಣು ಉಜ್ಜಿಕೊಂಡೆ.
ನಾನು ಇಳಿಬೇಕಾದ ಜಾಗ ಇನ್ನೂ 10 ಕಿ ಮೀ ಇದೆ. ಚಿಕ್ಕಮಗಳೂರಿಂದ  ನಿದ್ರಾದೇವಿ ಆವರಿಸೋಕೆ ಟ್ರೈ ಮಾಡುದ್ರೂನೂ ನಮ್ಮ ರೋಡು , ಆ ಟರ್ನಿಂಗ್ಗಳು ಮತ್ತೆ ಬಸ್ ಡ್ರೈವರ್ ಒಟ್ತ್ಗೆ ಸೇರಿ ಅವಳನ್ನ ಓಡಿಸ್ತಾ ಇದ್ರು .

ಅರೆ ಕೆಂಪಾದ ನನ್ನ ಕಣ್ಣುಗಳನ್ನ ತೆರೆದು ಕಪ್ಪಾದ ವಿಂಡೊ ಗ್ಲಾಸ್ ನಿಂದ ಆಚೆ ನೋಡೋಕೆ ಟ್ರೈ ಮಾಡ್ತಾ ಇದ್ದೆ . ಅದೇ ಊರು ಯಾವ್ದೇ ರೀತಿ ಆದ ಮೇಜರ್ ಚೇಂಜಸ್ ನನಗೆ ಕಾಣಿಸ್ತಾ ಇರ್ಲಿಲ್ಲ . ಅಲ್ಲಿ ಇಲ್ಲಿ ಒಂದೊಂದು ಹೊಸ ಬಿಲ್ಡಿಂಗ್ ಬಿಟ್ರೆ ಯಾವುದೇ ರೆವೊಲ್ಯೂಶನರೀ ಚೇಂಜಸ್ ಇಲ್ಲ.  ಹಾಗೆ ಕಣ್ಣು ಹಾಯಿಸಿದಾಗ ಕಾನ್ಸಿದ್ದು ಆ ಕಾಲದ ಫೇಮಸ್ ಹಾಗೂ ನಮ್ಮ ಫವೊಊರಿಟ್  ಹೇರ್ ಕಟ್ ಶಾಪ್ . ಬೆಳಿಗ್ಗೆ 6 ಘಂಟೆಗೆ ಎದ್ದು 4 ಕಿ ಮೀ ನೆಡೆದು , ಬಸ್ ಹಿಡ್ಕೊಂಡು ಅಲ್ಲಿಗೆ ಬಂದು , ಬೇರೆ ಬೇರೆ ಸ್ಟೈಲ್ ಮಾಡೋಕೆ ಅವನ ತಲೆ ತಿಂದು ಹೋಗ್ತಾ ಇದ್ವಿ . ಎಷ್ಟೇ ತಲೆ ತಿಂದ್ರುನೂ ಆತ ಅದನ್ನ ಮನಸ್ಸಿಗೆ ಹಕ್ಕೊಲ್ದೇ ಅವನಿಗೆ ಗೊತ್ತಿದ್ದ ಒಂದು ಹೇರ್ ಕಟ್ ನಾ ಎಲ್ಲರ್ಗೂ ಮಾಡಿ , ಅವರನ್ನ ಖುಷಿಯಾಗಿ ಮನೆಗೆ ಕಳಿಸ್ತಾ ಇದ್ದ ಅವನ ಕ್ಲೆವರ್‌ನೆಸ್ ನಾ ಮನಸ್ಸಿನೆಲ್ಲೆ ನೆನೆಸಿಕೊಂಡು ನಗ್ತಾ ಇದ್ದೇ.

ಹಾಗೆ ನಿದ್ರಿಸುವ ಪ್ರಯಾಣಿಕರನ್ನು ಹೊತ್ತ ನಮ್ಮ ಐರಾವತ ಮುಂದೆ ಸಾಗಲು ಶುರುವಾಯ್ತು. ಆಚೆ ಚಿಕ್ಕದಾಗಿ  ಮಳೆ ಬೇರೆ.  ಆ ಮಳೆ ನೋಡಿ ಗಾಳಿಪಟ
ಮೂವೀ ನಲ್ಲಿ ರಾಂಘಾಯನ ರಘು ಹೇಳುವ "ಇದೇನು ಊರೋ ಅಥವಾ ಬಚ್ಚಲು ಮನೇನೂ" ಡೈಲಾಗ್ ಮನಸ್ಸಿಗೆ ಬಂತು. ನಮ್ಮೂರಲ್ಲಿ ವರ್ಷಕ್ಕೆ ಆರು ತಿಂಗ್ಳು ಮಳೆ ಗ್ಯಾರೆಂಟೀ . ಕೆಲವು ಸಲ ಹಿಡಿದ ಮಳೆ ಮೂರು ಮೂರು ದಿನ ಆದ್ರೂ ಬಿಡೋದಿಲ್ಲ . ಆದ್ರೂ ತಿಂಡಿಪೋತರಿಗೆ ಮಳೆಗಾಲನೇ ಸರಿ ಬಿಡಿ. ಇದರ ಬಗ್ಗೆ ಆಮೇಲೆ ಹೇಳ್ತೀನಿ. ಹಾಗೆ ಹೊರಟ ಬಸ್ಸು ಮುಂದೆ ಚಲಿಸುತ್ತ ಇತ್ತು ನನ್ನ ಯೋಚನೆಗಳು ಹಿಂದೆ ಹೋಗ್ತಾ ಇತ್ತು . ಪ್ರತಿ ಸಲ ಊರ್‌ಗೆ ಹೋದ್ರು ಹೀಗೇನೆ
ಬಸ್ ನಲ್ಲಿ ಕೂತು ಹಳೆಯದನ್ನು ಯೋಚಿಸೋದು . ಹಳೇ ಸ್ನೇಹಿತ, ಹಳೆಯ ನೆನಪುಗಳು , ಹಳೆಯ ಹುಡುಗಿ ಯಾವತ್ತೂ ನಿದ್ದೆ ಮಾಡೋಕೆ ಬಿಡೋದಿಲ್ಲವಂತೆ.

ಹಾಗೇ ಸಾಗ್ತಾ ಸಾಗ್ತಾ ನನ್ನ ಕಣ್ಣಿಗೆ ಬಿದ್ದಿದ್ದು ನನ್ನ ಮಿಡ್ಲ್ ಸ್ಕೂಲ್ , ಲಾಲಿ ತಿಂತಾ ಇದ್ದ ಅಂಗಡಿಗಳು , ಗಣೇಶನ ದೇವಸ್ತಾನ , ನಾವು ಬಾಳೆ ಹಣ್ಣು ಕದಿಯುತ್ತಿದ್ದ ಅಂಗಡಿಗಳು ಹೀಗೇ ಯೋಚನೆಗಳು ಸಾಗ್ತಾ ಹೋದ್ವು. ಆಗ ಇಷ್ಟ ಆಗ್ತಾ ಇದ್ದ ಹುಡುಗಿಯರು ಅವರ ಮುಕಗಳು ಎಲ್ಲಾ ನನ್ನಲ್ಲಿ ಒಂದು ಮುಗುಳ್ನಗು ತರುವಲ್ಲಿ ಯಶಸ್ವಿಆದ್ವು . ತುಂಬಾ ಜನ ಆಲ್‌ರೆಡೀ ಮದುವೆ ಆಗಿದಾರೆ ಕೆಲವ್ರಿಗೆ ಮಕ್ಕಳೂ ಆಗಿವೆ. ಕೆಲವು ಸಲ ಸಿಕ್ಕಿದ್ರೆ "ಯಾಕಮ್ಮ ತುಂಬಾ ಅರ್ಜೆಂಟ್ ಇತ್ತಾ ಸಂಸಾರ ಮಾಡೋಕೆ?? ನಾವು ಮದುವೆಗೆ ಕೇಳೋವರ್ಗೂ ಕಾಯೋಕೆ ಆಗ್ಲಿಲ್ವಾ" ಅಂತ ಕೇಳೋಣ ಅನ್ಸುತ್ತೆ ಆದ್ರೆ ಕೇಳೋಕೆ ಆಗಲ್ಲ .

ಮುಂದೆ ಸಿಕ್ಕಿದ್ದು ಹೈ ಸ್ಕೂಲ್ . ಇದೆ ಜಾಗ ನಮಗೆ ಬೆಂಗಳೂರಿಗೆ ಬರೋಕೆ ಅಡಿಪಾಯ ಹಾಕಿದ್ದು . ಒಳ್ಳೆ ಪರ್ಸೆಂಟೇಜ್ ಬಂದ್ರೆ ಮಾತ್ರ ಬೆಂಗಳೋರಿನಲ್ಲಿ
ಓದೋಕೆ ಆಗೋದು , ಅಲ್ಲಿ ಇರೋವ್ರೆಲ್ಲಾ ತುಂಬಾ ಇಂಟೆಲಿಜೆಂಟ್ ಅನ್ನೋ ನಮ್ಮಣ್ಣನ  ಮಾತನ್ನ ತುಂಬಾ ಸೀರೀಯಸ್ ಆಗಿ ತಗೊಂಡು ಓದಿದ್ದೆ ಆವಾಗ .
ಇಲ್ಲಿಗೆ ಬಂದ್ಮೇಲೇನೆ ಗೊತ್ತಾಗಿದ್ದು ಎಲ್ಲಾರ ಮನೆ ದೋಸೆನು ತೂತೇ ಅಂತ . ಶನಿವಾರ ಊಟ ಮಾಡ್ದೇನೆ 5 ಘಂಟೆವರ್ಗೂ ಆಡ್ತಾ ಇದ್ದ ಕ್ರಿಕೆಟ್ ನೆನಪಾಯ್ತು.
ಅದ್ರಲ್ಲೂ ಪಾಲಿಟಿಕ್ಸ್ , ಸ್ಕೂಲ್ ನಲ್ಲಿ ಟೀಚರ್ ಜೊತೆ ಪಾಲಿಟಿಕ್ಸ್ , ಕ್ಲಾಸ್ ಮಾನಿಟರ್ ಆಗೋಕೆ ಪಾಲಿಟಿಕ್ಸ್ ಅಬ್ಬಾ ಈ ಪಾಲಿಟಿಕ್ಸ್ ಯಾವ ಚಿಕ್ಕ ಲೆವೆಲ್‌ನಲ್ಲೇ ಇರುತ್ತೆ , ಈಗ ಬುದ್ದಿಜೀವಿಗಳು ಮೈಕ್ ಹಿಡ್ಕೊಂಡು ಆಫೀಸ್ ನಲ್ಲಿ , ಅಸೆಂಬ್ಲೀ ನಲ್ಲಿ , ಮಠದಲ್ಲಿ ನೆಡಿಯೋ ಪಾಲಿಟಿಕ್ಸ್ ಬಗ್ಗೆ ಮಾತಾಡ್ತಾರೆ ಆದರೆ ಅದು ಸ್ಕೂಲ್ ನಿಂದಾನೆ ಬಂದಿರುತ್ತೆ ಅನ್ನೋದು ನಗ್ನ ಸತ್ಯ.

ಹೀಗೆ ನನ್ನ ಯೋಚನೆಗಳು ಎಷ್ಟು ಫಾಸ್ಟ್ ಆಗಿ ಹೋಗ್ತಾ ಇದ್ವೋ ಅಷ್ಟೇ ಫಾಸ್ಟ್ ಆಗಿ ನಮ್ಮ ಐರಾವತಾನು ಚಲಿಸುತ್ತ ಇತ್ತು . ನಾನು ನನ್ನ ಯೋಚನಾ ಲಹರಿಯಲ್ಲಿ ಮುಳುಗಿರುವಾಗ್ಲೇ ಬಂತು ನೋಡಿ ನಾನು ಇಳಿಯಬೇಕಾದ ಜಾಗ. ಬೇಗ ಎದ್ದು ನನ್ನ ಬ್ಯಾಗ್ ತಗೊಂಡು ಮುಂದೆ ಓಡಿದೆ. ಅದು ರೆಗ್ಯುಲರ್ ಬಸ್ ಸ್ಟಾಪ್ ಆಗಿದ್ರು ಕೂಡ ರಾತ್ರಿ ಹೊತ್ತು ಬಸ್ ಗಳನ್ನ ಅಲ್ಲಿ ನಿಲ್ಲಿಸೋಲ್ಲ. ಯಾರಾದ್ರೂ ಇಳಿಯುವವರು ಇದ್ರೆ ಮಾತ್ರ . ಹಾಗೆ ಹೋಗಿ ಡ್ರೈವರ್ ಗೆ ನಿಲ್ಲಿಸಲು ಹೇಳಿದ್ರೆ ಆತ ನಾನೇನು ಹುಚ್ಚಾನ ಅಂತ ನೋಡ್ದ. ( ಅವನ ತಪ್ಪಿಲ್ಲ ಬಿಡಿ , ಅಲ್ಲಿ ನಕ್ಷಲ್ ಪ್ರಾಬ್ಲಮ್ ಇರೋದ್ರಿಂದ ಸ್ವಲ್ಪ ಭಯ ಪಡ್ತಾರೆ ) . ಇಲ್ಲ ಇಲ್ಲೇ ಇಳಿತೀನಿ ಕರ್ಕೊಂಡು ಹೋಗೋಕೆ ಬರ್ತಾರೆ ಅಂದಾಗ ನಿಲ್ಲಿಸುವ ಮನಸ್ಸು ಇಲ್ದೆ ಇದ್ರೂನೂ ಕಷ್ಟ ಪಟ್ಟು ಬ್ರೇಕ್ ಮೇಲೆ ಕಾಲಿಟ್ಟ. ಬ್ಯಾಗ್ ನಾ ಹೆಗಲಿಗೆ ಹಾಕ್ಕೊಂಡು , ಸುಖ ಪ್ರಯಾಣ ಕೊಟ್ಟ ಐರಾವತಕ್ಕೆ ಥ್ಯಾಂಕ್ಸ್ ಹೇಳಿ ಕೆಳಗಡೆ ಕಾಲಿಟ್ಟೆ.  ಮೊದಲೇ ಆತಂಕದಲ್ಲಿದ್ದ ಡ್ರೈವರ್ ಕೆಳಗೆ ಸೇಫ್ ಆಗಿ ಇಳಿದ್ನೋ
ಇಲ್ವೋ ಅಂತಾನೂ ನೋಡ್ದೆ ಆಕ್ಸೆಲರೇಟರ್ ಮೇಲೆ ಕಾಲು ಇಟ್ಟೆ ಬಿಟ್ಟ. ಮುಖದ ಮೇಲೆ ಹೊಗೆ ಉಗುಳಿ ಅದರ ಗಮ್ಯಸ್ಥಾನ ( ಡೆಸ್ಟಿನೇಶನ್) ಕಡೆ ದೌಡಾಯ್ಸ್ತು ಐರಾವತ.

ನನ್ನ ನೋಡಿ ಖುಷಿ ಆದ ಹಾಗೆ ಅಲ್ಲಿಯವರೆಗೂ ಜಿನುಗುತ್ತಿದ್ದ ಮಳೆರಾಯ ಕೂಡ ಸ್ವಲ್ಪ ದೊಡ್ಡ ಹನಿಗಳನ್ನು ಹಾಕಲು ಶುರು ಮಾಡಿದ. ಚಳಿಗೆ ನಡುಗುತ್ತಿದ್ದ ನನ್ನ ಶರೀರವನ್ನು ಜ್ಯಾಕೆಟ್ ನಲ್ಲಿ ಬಂಧಿಸಿ , ಹೊಗೆ ಬತ್ತಿ ಅಂಟಿಸುವ ಮನಸ್ಸಾದರೂ ಕೂಡ ಅದನ್ನ ಆಮೀಕಿಟ್ಟೂ ಪ್ರಕೃತಿ ಕರೆಯಲ್ಲಿ ತೊಡಗಿದೆ. ಅಲ್ಲಿ ಒಂದು ಬಸ್ ಸ್ಟ್ಯಾಂಡ್ ಹಾಗೂ ಪಕ್ಕದಲ್ಲಿ ಒಂದು ಅಂಗಡಿ( ತೆರೆದಿರುವ ಅಂಗಡಿ ಅಲ್ಲ ಮುಚ್ಚಿರುವ ಅಂಗಡಿ )  ಬಿಟ್ಟರೆ ಇನ್ನೇನು ಇಲ್ಲ. ಒಂದು ಬೀದಿ ದೀಪವು ಗತಿ ಇಲ್ಲದೆ ಇರುವ ಆ ಜಾಗದಲ್ಲಿ ಬೃಹದಾಕಾರದಲ್ಲಿ ಬೆಳೆದಿರುವ ಮರಗಳನ್ನು ಬಿಟ್ಟರೆ ಶಬ್ದ ಮಾಡುವ ಜೀರುಂಡೆಗಳು , ಬಿಬ್ರಿಗಳು ಇವೆಯಸ್ಟೆ . ಆ ಕಾರ್ಗತ್ತಲಲ್ಲಿ
ಒಂಟಿ ಪಿಶಾಚಿಯಂತೆ ನಿಂತಿದ್ದ ನನಗೆ ಚಿಕ್ಕ ವಯಸ್ಸಿನಲ್ಲಿ ಇಲ್ಲಿ ದೆವ್ವ ಭೂತ ಇದೆ ಎನ್ನುವ ಮಾತುಗಳು ನೆನಪಾಗಿ ಸುತ್ತ ಮುತ್ತ ನೋಡಲು ಶುರು ಮಾಡಿದೆ.
ನನ್ನ ದುರದೃಷ್ಟಕ್ಕೆ ಕಂಪನೀ ಕೊಡಲು ಒಂದು ದೆವ್ವವು ಇರಲ್ಲಿಲ . ಅವುಗಳು ಕೂಡ ಚಳಿ ಮತ್ತು ಮಳೆಗೆ ಬೆದರಿ ಗೂಡು ಸೇರಿಕೊಂಡಿರಬೇಕು ಎಂದುಕೊಂಡೆ.

ನನ್ನ ಕರೆದುಕೊಂಡು ಹೋಗಲು ಬರಬೇಕಾಗಿದ್ದ ಕಸಿನ್ ಬ್ರದರ್ ಇನ್ನೂ ಬಂದಿರ್ಲಿಲ್ಲ. ಪಾಪ ಮಳೆ ಬೇರೆ , ಅವ್ನಿಗೆ ಮದುವೆ ಬೇರೆ ಆಗಿದೆ ಬೆಳಿಗ್ಗೆ ಮುಂಚೆ ಚಳಿಯಲ್ಲಿ ಅವ್ನ ಹೆಂಡ್ತೀನ ಬಿಟ್ಟು ಬರ್ತಾನೆ ಅಂತ ಎಕ್ಸ್‌ಪೆಕ್ಟ್ ಮಾಡೋದು ತಪ್ಪು ಅಂತ ಅಂದ್ಕೊಂಡು ಮನೆ ಕಡೆ ಹೆಜ್ಜೆ ಹಾಕೂಕೇ ಶುರು ಮಾಡಿದೆ. ಆದ್ರೂ ನೆಡೆಯಬೇಕಿದ್ದ 4 ಕಿ ಮೀ ಡಿಸ್ಟೆನ್ಸ್ ನನ್ನ ಕಾಡ್ತಾ ಇತ್ತು.

ಸ ಶೇ ಷ ( ಟು ಬಿ ಕಂಟಿನ್ಯೂಡ್ )











ಧನಾತ್ಮಕ ಆಲೋಚನೆ  ( ಪಾಸಿಟಿವ್ ಥಿಂಕಿಂಗ್ ) ಅಂದ್ರೆ ಏನು ???
ಶಿರಸ್ತ್ರಾಣ ( ಹೆಲ್ಮೆಟ್) ಇಲ್ಲದೆ ಗಾಡಿ ಓಡಿಸುವಾಗ 5 ಅಡಿ (ಫೀಟ್)
ಅಂತರದಲ್ಲಿ ಆರಕ್ಷಕ ( ಪೋಲೀಸ್) ನಿಂತಿದ್ರು ಅವನು ನಮ್ಮನ್ನ ತಡೆಯೋಲ್ಲ  ಅಂತ ಯೋಚಿಸೋದಾ??
ಅಥವಾ ತರಗತಿಯಿಂದ (ಕ್ಲಾಸ್) ಪರಾರಿಯಾಗಿ (ಬಂಕ್ ಮಾಡಿ) ಹೋಗುವಾಗ ಪ್ರಾಚಾರ್ಯರು  ( ಪ್ರಿನ್ಸಿಪಲ್)  ಎದುರಿಗೆ ಸಿಕ್ಕಿದ್ರೂನೂ ಏನು
ಮಾಡೊಲ್ಲಾ ಅನ್ನೋ ನಂಬಿಕೇನ ??
ಅಥವಾ ರೈಲು ಹಳಿ ಮೇಲೆ ನಿಂತು ದೇವರು ನನ್ನ ಕಾಪಾಡ್ತಾನೆ ಅಂತ ನಂಬಿಕೊಳ್ಳುವುದ??
ಹೀಗೆ ಧನಾತ್ಮಕ ಆಲೋಚನೆ ಬಗ್ಗೆ ತುಂಬಾ ಉದಾಹರಣೆಗಳು, ವಿಶ್ಲೇಷಣೆಗಳು ಕೊಡಬಹುದು. ಆದರೆ ನಿಜವಾಗ್ಲೂ ಧನಾತ್ಮಕ ಆಲೋಚನೆ
ಮಾಡುವವರು ಎಷ್ಟು  ಜನ ?? ಯಾವುದನ್ನ ಧನಾತ್ಮಕ ಆಲೋಚನೆ  ಹಾಗೂ ಯಾವುದನ್ನ ಗಾಢನಂಬಿಕೆ ( ಓವರ್ ಕಾನ್ಫಿಡೆನ್ಸ್) ಅಂತ
ಕರಿಬಹುದು?? ಪ್ರಾಯಶಃ ಇದಕ್ಕೆ ಉತ್ತರ ಕೊಡುವವರು ತುಂಬಾ ಕಡಿಮೆ.
ಈಗ ಈ ಬರವಣಿಗೆ ಮುಂದೆ ತುಂಬಾ ಆಸಕ್ತಿಯುತವಾಗಿರುತ್ತೆ ಅಂತ ಯೋಚಿಸೋದು ಧನಾತ್ಮಕ ಆಲೋಚನೆಯೂ ಆಗಬಹುದು ಅಥವಾ
ಗಾಢನಂಬಿಕೆಯೂ ಆಗಬಹುದು.  ಹೀಗೆ ಪ್ರತಿಯೊಂದು ಆಲೋಚನೆಯನ್ನು ಬೇರೆ ಬೇರೆ ವರ್ಗಗಳಿಗೆ ಸೇರಿಸಬಹುದು.

ಜೇವನದಲ್ಲಿ ಹುಡುಗಿ/ ಹುಡುಗ ಕೈ ಕೊಟ್ಟಾಗ, ದುಡ್ಡಿಗೆ ತೊಂದರೆ ಇದ್ದಾಗ, ಕೆಲಸ ಸಿಗದೆ ಇದ್ದಾಗ , ಕೌಟುಂಬಿಕ ಕಲಹ ಇದ್ದಾಗ ಸ್ನೇಹಿತರು
ಧನಾತ್ಮಕ ಆಲೋಚನೆ ಬಗ್ಗೆ ಮಾತಾಡೋದು ಸಹಜ, ಆದರೆ ಅದೇ ತೊಂದರೆ ಅವರಿಗೆ ಬಂದಾಗ ಅವರಿಗೆ ಧನಾತ್ಮಕ ಆಲೋಚನೆ ಯಾಕೆ
ಬರುವುದಿಲ್ಲ??? ಹಾಗಾದರೆ ಧನಾತ್ಮಕ ಆಲೋಚನೆ ಬರೇ ಬಾಯಲ್ಲಿ ಹೇಳಲು ಮಾತ್ರಾನಾ ??  ಧನಾತ್ಮಕ ಆಲೋಚನೆಯಿಂದ ಬದುಕುವವರು
ಯಾರಾದ್ರೂ ಇದ್ದಾರಾ??  ನಿರುದ್ಯೋಗಿಗೆ ಉದ್ಯೋಗದ ಭರವಸೆ ನೀಡುವ ಆಲೋಚನೆ ಯಾವುದು?? ಹೀಗೆ ಚರ್ಚಾಸ್ಪದವಾಗಿ ಸಾಗುವ ಈ ವಿಷಯದ ಬಗ್ಗೆ ದಿನವಿಡೀ ಚರ್ಚೆ ಮಾಡಿದರೂ ಮುಗಿಯುವುದಿಲ್ಲ.

ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುವ ಯೋಚನೆ ಮಾಡಿದ್ದಾಗ ಅದು ಧನಾತ್ಮಕ ಯೋಚನೆ ಆಗಿತ್ತ?? ಆತನಿಗದ್ದ ಶಿವನ ಒಲುಮೆ ಆತನನ್ನು ಹಾಗೆ ಪ್ರೇರೇಪಿಸಿತ?? ಅದು ಆತನಿಗೆ ಯಶಸ್ಸು ತಂದುಕೊಟ್ಟಿದರೆ ಅದನ್ನು ಧನಾತ್ಮಕ ಆಲೋಚನೆ ಎಂದು ಹೇಳಬಹುದಿತ್ತಾ ?? ಅವನ ಸಾವಿಗೆ ಕಾರಣವಾದ ಅದೇ ಯೋಚನೆಯನ್ನು ನಾವು ಮೂಢನಂಬಿಕೆ ಅಥವಾ ದುರಹಂಕಾರ ಎಂದು ಹೇಳ್ತೀವಾ ?? ಹಾಗಾದರೆ ಮನುಷ್ಯನಿಗೆ ಯಶಸ್ಸು ತಂದುಕೊಡುವ ಆಲೋಚನೆಯನ್ನು ಮಾತ್ರ ಸಮಾಜ ಧನಾತ್ಮಕ ಆಲೋಚನೆ ಎಂದು ಕರೆಯುತ್ತಾ?? ಒಬ್ಬ ಸಾಮಾನ್ಯ ಮನುಷ್ಯನಾಗಿ ಧನಾತ್ಮಕ ಆಲೋಚನೆ ಹಾಗೂ ದುರಹಂಕಾರ ಅಥವಾ ಗಾಢನಂಬಿಕೆ ಮಧ್ಯೆ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ ?? ಹೀಗೆ ಯೋಚ್ನೆ ಮಾಡ್ತಾ ಮಾಡ್ತಾ ಕೊನೆಗೂ ತೀರ್ಮಾನ ಕೊಡೋಕೆ ಆಗ್ದೇ ಇರೋ ಚರ್ಚೆ ಆಗಿ ಉಳಿದುಬಿಡುತ್ತೆ ಈ ವಿಷಯ.


ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಏರೀಸುವ ಈ ವಿಷಯ ಕೆಲವೊಮ್ಮೆ ತುಂಬಾ ಸರಳವಾಗಿ ಕಾಣಿಸುತ್ತೆ.  ಸಂಬಧ ಕಡಿದುಕೊಂಡ ವ್ಯಕ್ತಿ ಹೊಸ ಸಂಗಾತಿಯನ್ನು ಆಶಿಸುವುದು , ವ್ಯವಹಾರ ( ಬುಸಿನೆಸ್ಸ್ ) ದಲ್ಲಿ ಪ್ರಗತಿಯನ್ನು ಬಯಸುವುದು , ಪರೀಕ್ಷೆಯಲ್ಲಿ ಉತ್ತಮ್ಮ ಅಂಕಗಳನ್ನು ಬಯಸುವುದು ( ಓದಿದ ನಂತರ) ಮತ್ತು ಮನೆಯಲ್ಲಿ  ಹೆಂಡತಿ ಜಗಳ ಮಾಡದೆ ಇರುವುದನ್ನು ಬಯಸುವುದು ಹೀಗೆ ನಿಮ್ಮ ಆರಾಮ ವಲಯದಲ್ಲಿ ( ಕಂಫರ್ಟ್ ಜ಼ೋನ್ ) ಒಳ್ಳೆಯ ಸಂಗತಿಗಳನ್ನು ಬಯಸುವುದನ್ನು ಧನಾತ್ಮಕ ಯೋಚನೆ ಎಂದು ಹೇಳಬಹುದು. ಆದ್ರೂ ಕೂಡ ಈ ಧನಾತ್ಮಕ ಯೋಚನೆಗಳು ಯಾವಾಗ್ಲೂ ಸತ್ಯ ಆಗುತ್ತೆ ಅಂತ ಹೇಳೋಕೆ ಆಗಲ್ಲ .
 ಧನಾತ್ಮಕ ಯೋಚನೆಗಳು ಬುಡವಿಲ್ಲದ ( ಬೇಸ್ಲೆಸ್)  ವಾದ ಅಥವಾ ಚರ್ಚೆ ಅಂಥ  ಅನ್ಸುದ್ರೂ  ಎಲ್ಲೋ ಒಂದು ಕಡೆ ಒಬ್ಬ ಭಿಕ್ಷುಕನಿಗೆ, ನಿರುದ್ಯೋಗಿಗೆ, ಭಗ್ನ ಪ್ರೇಮಿಗೆ, ವಿಧವೆಗೆ ಮತ್ತು ಹಲವು ಭಾವನಾತ್ಮಕ ಜೀವಿಗಳಿಗೆ ಜೀವ ತುಂಬುವ ಔಷಧ ಅಂತ ಅನ್ಸುತ್ತೆ.  ನಮ್ಮ ಸ್ನೇಹಿತರು ಧನಾತ್ಮಕ ಚಿಂತನೆ ಬಗ್ಗೆ ಮಾತು ಆಡಿದಾಗ ಎಲ್ಲೋ ಒಂದು ಕಡೆ ಅದು ನಮ್ಮಲ್ಲಿ ಸ್ಪೂರ್ತಿ ತುಂಬ್ತಾ ಇದೆ ಅಂತ ಅನ್ಸುತ್ತೆ.  ಇಂದಿಗೂ ಈ ಜಗತ್ತಿನಲ್ಲಿ ಎಷ್ಟೊಂದು ಆತ್ಮಹತ್ಯೆಗಳು ತಪ್ಪಿಹೋಗ್ತಾ
ಇರೋದು ಧನಾತ್ಮಕ ಆಲೋಚನೆಯಿಂಧ ಅಂತ ಅನ್ಸುತ್ತೆ. 

ಹೀಗೆ ಎಷ್ಟೊಂದು ಮದ್ಯಸಾರ ಪಂಡಿತರು ಹಾಗೂ ಮಾನೋತಜ್ಞರು ಹೇಳುವ ಹಾಗೆ ನಾವು ಕೂಡ ಇದರ ಬಗ್ಗೆ ಜಾಸ್ತಿ ಚರ್ಚೆ ಮಾಡದೆ ಧನಾತ್ಮಕ ಆಲೋಚನೆಯನ್ನು ನಂಬಬೇಕಾಗಿದೆ . ಈಗಿರುವ ಜೀವನ ವಿಧಾನ ಹಾಗೂ ಒತ್ತಡಗಳಿಗೆ ಧನಾತ್ಮಕ ಆಲೋಚನೆ  ಒಂದೇ ಆತನನ್ನು ಹುಚನನ್ನಾಗಿ ಮಾಡದೆ ತಡೆಯಬಹ್ದು ಎನ್ನುವುದು ನನ್ನ ಭಾವನೆ. ಯಾವುದು ಧನಾತ್ಮಕ ಆಲೋಚನೆ ಹಾಗೂ ಯಾವುದು ಅಲ್ಲ ಅನ್ನುವ ತೀರ್ಮಾನ ನಿಮಗೆ ಬಿಟ್ಟಿದ್ದು .  ಈಗ ನನ್ನ ಧನಾತ್ಮಕ ಆಲೋಚನೆ ಏನಂದ್ರೆ ಈ ಬರವಣಿಗೆಯನ್ನು ಜನ ಮೆಚ್ತಾರೆ , ಠೀಕೆ ಮಾಡುವವ್ರು ಮುಂದಿನ ಒಳ್ಳೆ ಭರವಣಿಗೆಗೆ ಸಲಹೆಗಳನ್ನು ಕೊಡ್ತಾರೆ ಅನ್ನೋದು.

ಒಂದು ಮನವಿ
ಬರವಣಿಗೆಯಲ್ಲಿ ಇದು ನನ್ನ ಮೊದಲನೇ ಪ್ರಯೋಗ. ಯಾವುದೇ ತಪ್ಪಿದ್ದರೆ ದಯವಿಟ್ಟು ಮನ್ನಿಸಿ. ಬೆಂಗಳೂರು ಕನ್ನಡಿಗರಿಗೆ ಸಹಾಯವಾಗಲು ಕ್ಲಿಷ್ಟಕರ ಪದಗಳಿಗೆ ಆಂಗ್ಲ ಭಾಷೆಯ ಅರ್ಥವನ್ನು  ಕೊಡಲು ಪ್ರಯತ್ನಿಸಿದ್ದೇನೆ. ಬರವಣಿಗೆಯನ್ನು  ಸುಧಾರಿಸುವ ಯಾವುದೇ ಸಲಹೆ ನಿಮ್ಮಲ್ಲಿ ಇದ್ದರೆ ದಯವಿಟ್ಟು ನೀಡಿ.

ಪ್ರಿಯಾಂಕ್ ರಾವ್